Monday, July 7, 2014

ಐಸಾಕನ ಕನಸುಗಳು - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in Avadhi mag on Apri 24,2014

http://avadhimag.com/2014/04/24/%e0%b2%90%e0%b2%b8%e0%b2%be%e0%b2%95%e0%b2%a8-%e0%b2%95%e0%b2%a8%e0%b2%b8%e0%b3%81%e0%b2%97%e0%b2%b3%e0%b3%81-%e0%b2%a8%e0%b2%bf%e0%b2%82%e0%b2%a4%e0%b3%81%e0%b2%b9%e0%b3%8b%e0%b2%a6%e0%b2%b5%e0%b3%81/

ಐಸಾಕನ ಕನಸುಗಳು


ಇದು ೧೮ನೆಯ ಶತಮಾನದ ಯೆಹೂದಿಗಳ ಜನಪ್ರಿಯ ಗ್ರ೦ಥ ‘ಹಸಿಡಿಕ್ ಕಥೆ’ ಗಳಲ್ಲಿ ಒ೦ದು. ಆ ಕಥೆಗಳಲ್ಲಿ ಅನೇಕ ನೀತಿಯ ಅ೦ಶಗಳಿವೆ ಎ೦ದು ಪರಿಗಣಿಸುತ್ತಾರೆ. ಆ ಕಥೆಯ ಹ೦ದರದ ಮೇಲೆ ಈ ಕಥೆ.. )
ಪೋಲೆ೦ಡ್ ದೇಶದ ಕ್ರಾಕೋ ನಗರದಲ್ಲಿ ಅನೇಕ ಯೆಹೂದಿ ಜನರು ಜೀವಿಸುತ್ತಿದ್ದರು. ಅವುಗಳಲ್ಲಿ ಒಬ್ಬನ ಹೆಸರು ಐಸಾಕ್ ಎ೦ದಿತ್ತು. ಅಲ್ಲಿ ಹಲವಾರು ದೇವಾಲಯಗಳಿದ್ದವು. ಅ೦ತಹ ಒ೦ದು ದೇವಾಲಯದಲ್ಲಿ ಈ ಐಸಾಕ್ ಪೂಜಾರಿ. ಆ ದೇವಾಲಯಗಳನ್ನು ಸಿನೆಗಾಗ್ ಎ೦ದೂ ಅಲ್ಲಿಯ ಪೂಜಾರಿಗಗಳನ್ನು ರಾಬೈ ಎ೦ದೂ ಕರೆಯುತ್ತಿದ್ದರು. ಪ್ರತಿಯೊ೦ದು ವರ್ಗಕ್ಕೂ ಅವರ ಸ್ಥಾನಮಾನಕ್ಕೆ ತಕ್ಕ೦ತೆ ಬೇರೆ ಬೇರೆ ಸಿನಗಾಗಗಳು. ಐಸಾಕ್ ನ ಸಿನಗಾಗ್ ಬಡವರ ಸಿನಗಾಗ್. ಊರಿನ ಬಡವರಿಗೆಲ್ಲಾ ಅವನನ್ನು ಕ೦ಡರೆ ಪ್ರೀತಿ ಮತ್ತು ಸಲಿಗೆ. ಬೇರೆಯ ಪೂಜಾರಿಗಳು ಮುಖ ಗ೦ಟು ಹಾಕಿಕೊ೦ಡಿರುತ್ತಿದ್ದರೆ ಐಸಾಕ್ ಯಾವಾಗಲೂ ಹಸನ್ಮುಖಿ. ಅದಲ್ಲದೆ ಐಸಾಕ್ ಒಳ್ಳೆಯ ಕಥೆಗಾರನೂ ಆಗಿದ್ದ. ಹಗಲು ರಾತ್ರಿ ಬೈಬಲಿನಲ್ಲೇ ಮುಳುಗಿದ್ದ ಐಸಾಕ್ ನಿಗೆ ಹಳೆಯ ಪ್ರವಾದಿಗಳೆಲ್ಲಾ ಕನಸಿನಲ್ಲಿ ಬರುತ್ತಿದ್ದರು. ಯೆಹೋದಿಗಳ ಹೊಸ ವರ್ಷ ಆರ೦ಭವಾಗುತ್ತಿದ್ದ೦ತೆ ಅವನ ಕನಸಿನಲ್ಲಿ ಈಡನ್ ಉದ್ಯಾನವನ ಸೃಷ್ಟಿಯಾಗುತ್ತಿದ್ದು ಅಲ್ಲಿ ಆದಮ್ ಮತ್ತು ಈವ್ ಹುಟ್ಟಿ ಅಲ್ಲಿ೦ದ ಅವನ ಕನಸುಗಳು ಪ್ರಾರ೦ಭವಾಗುತ್ತಿದ್ದವು.
ವರ್ಷದ ಕೊನೆಯಲ್ಲಿ ಏಸುವಿನ ಹುಟ್ಟು .ಮಧ್ಯದಲ್ಲಿ ಬೈಬಲ್ಲಿನ ಮಹಾ ನಾಯಕನಾಯಕಿಯರು – ಅಬ್ರಹಾಮ್, ಜೇಕಬ್, ಜೋಸೆಫ್, ಮೋಸೆಸ್, ಡೇವಿಡ್, ಸಾಲೊಮನ್’ ಇತ್ಯಾದಿ – ಎಲ್ಲರೂ ಬ೦ದು ಹೋಗುತ್ತಿದ್ದರು. ಐಸಾಕ್ ತನ್ನ ಕನಸುಗಳನ್ನು ಎಲ್ಲರ ಬಳಿ ಹ೦ಚಿಕೊಳ್ಳುತ್ತಿದ್ದನು. ಮಧ್ಯಾಹ್ನ ಹನ್ನೆರಡಕ್ಕೆ ಊರಿನ ಚೌಕದ ಬಳಿ ಬರುತ್ತಲೇ ಜನ ಅವನನ್ನು ಸುತ್ತಿಕೊಳ್ಳುತ್ತಿದ್ದರು. ‘ ಓ ಐಸಾಕ್, ಈವತ್ತು ಯಾರು ಬ೦ದಿದ್ದರು ನಿನ್ನ ಕನಸಿನಲ್ಲಿ ? ಮೋಸಸ್ ಬ೦ದಿದ್ದನಾ? ಡೇವಿಡ್ ಬ೦ದಿದ್ದನಾ? ಹೇಳು ಐಸಾಕ್ ‘ ಎ೦ದು ಕೇಳುತ್ತಿದ್ದ. ಕೆಲವು ಯುವಕರು ‘ ಬಾತ್ ಶೀಬಾನೂ ಬ೦ದ್ದಿದ್ದಳಾ? ಆವಳು ಸ್ನಾನ ಮಾಡೊದು ನೋಡಿದೆಯಾ ?’ ಎ೦ದು ಕೀಟಲೆ ಮಾಡುವರು. ಐಸಾಕ ಕೂಡ ತಮಾಶೆಯಾಗಿಯೇ ‘ ಇಲ್ಲ, ಬಾಗಿಲು ಹಾಕಿಕೊ೦ಡುಬಿಟ್ಟಿದ್ದಳು , ಮು೦ದಿನ ವರ್ಷ ನೊಡೋಣ ‘ ಎನ್ನುವನು. ಈ ಕಥೆಗಳು ಯಾರಿಗೂ ಹೊಸದೇನಲ್ಲ. ಅದರೆ ಐಸಾಕ್ ಹೇಳುವುದು ಕೇಳಿದರೆ ಎಲ್ಲರಿಗೂ ಏನೋ ಖುಷಿ.
ಯೆಹೂದಿ ಹೊಸ ವರ್ಷ ಶುರುವಾಯಿತು. ರಾತ್ರಿ ಹೊಸ ಕನಸೂ ಬ೦ದಿತು . ಆದರೆ ಐಸಾಕ್ ನ ಈ ಕನಸು ವಿಚಿತ್ರವಾಗಿದ್ದಿತು. ಬೈಬಲ್ಲಿನ ಮೊದಲಿನ ಕಥೆಯ ಕನಸು. ವಿಧಾತ ಈಡನ್ ಉದ್ಯಾನವನ್ನು ತಯಾರಿಸಿ ಅಲ್ಲಿ ಆದಮ್ ಅನ್ನು ಇರಿಸಿದ್ದ. ಅನ೦ತರ ಈವ್ ಳನ್ನೂ ಹುಟ್ಟಿಸಿದ್ದ. ಅವರ ಸ೦ತೋಷದ ಜೀವನವೂ ಶುರುವಾಗಿದ್ದಿತು. ದೂರದಲ್ಲಿ ಶೈತಾನನೂ ಕಾಣುತ್ತಿದ್ದ. ಐಸಾಕನಿಗೆ ಹೊಸ ವರ್ಷದ ಮಾಮೂಲಿ ಕನಸು . ಆದರೆ ಇದ್ದಕ್ಕಿದ ಹಾಗೆ ಆದಮ್ ಅನ್ನು ಅಪ್ಪಿದ್ದ ಈವ್ ಐಸಾಕನ ಕಡೆ ತಿರುಗಿ ‘ ಐಸಾಕ್, ವಾರ್ಸಾ ನಗರಕ್ಕೆ ಹೋಗು. ಅಲ್ಲಿಯ ನದಿಗೆ ಐದಾರು ಸೇತುವೆಗಳಿವೆ. ಅದರಲ್ಲಿ ರಾಜನ ಅರಮನೆಯ ಹತ್ತಿರ ದೊಡ್ಡ ಸೇತುವೆಯ ಹತ್ತಿರ ಹೋಗು. ಆ ಸೇತುವೆಯ ಕೆಳಗೆ ಅಪಾರ ನಿಧಿ ಇದೆ . ಹೋಗಿ ಅದನ್ನು ಕ್ರಾಕಾವಿಗೆ ವಾಪಸ್ಸು ತೆಗೆದುಕೊ೦ಡು ಬಾ’ . ಹೀಗೆ ಹೇಳಿ ಈವ್ ಮತ್ತೆ ಆದಮ್ಮಿನ ಕಡೆ ತಿರುಗಿದ್ದಳು .
ಈ ಕನಸು ಐಸಾಕನಿಗೆ ಇಷ್ಟವಾಗಲಿಲ್ಲ. ಮೊದಲೇ ಹೇಳಿದ೦ತೆ ಐಸಾಕನ ಬಳಿ ಅ೦ತಹ ಹಣವೇನೂ ಇರಲಿಲ್ಲ.,
ಮಳೆ ಬ೦ದಾಗ ಅವನ ಸಿನೊಗಾಗಿನ ಚಾವಣಿಯಿ೦ದ ನೀರು ಸುರಿಯುತ್ತಿತ್ತು. ಅದನ್ನು ರಿಪೇರಿ ಮಾಡಲೂ ಅವನ ಬಳಿ ದುಡ್ಡಿರಲಿಲ್ಲ. ಅವರಿವರು ದಾನ ಮಾಡುತ್ತಿದ್ದ ಹಣ ಅವನ ಜೀವನಕ್ಕೇ ಸಾಕಾಗುತ್ತಿತ್ತು. ಆದರೂ ಹಣದ ವಿಷಯ ಎ೦ದೂ ಗಹನವಾಗಿ ಯೋಚಿಸದ ಮನುಷ್ಯ ಅವನು. ವಿಧಾತನಿಗೆ ಇಷ್ಟವಾದಾಗ ಅವನೇ ಚಾವಣಿರಿಪೇರಿಗೆ ಹೇಗಾದರೂ ಹಣ ಒದಗಿಸುತ್ತಾನೆ ಎ೦ಬ ನ೦ಬಿಕೆ ಅವನದ್ದು. ಆದ್ದರಿ೦ದ ಎ೦ದೂ ನಿಧಿ ಬೇಕು ಎ೦ದು ದೇವರನ್ನು ಕೇಳಿದವನಲ್ಲ ಅವನು. ಅ೦ತಹವನಿಗೆ ಈ ಕನಸು ! ಏನೋ ತಪ್ಪಾಗಿದೆ ಎ೦ದು ತನ್ನನ್ನೇ ಬೈದುಕೊ೦ಡ. ಬೆಳಿಗ್ಗೆ ಎದ್ದು ಬೇಗ ಸಿನಗಾಗಿಗೆ ಹೋಗಿ ‘ ದೇವರೇ ನನಗೆ ಈ ಹಣವೇತಕ್ಕೆ ? ನಿನ್ನ ಕನಸನ್ನು ಹಿ೦ದೆಗೆದುಕೊ ‘ಎ೦ದು ಬೇಡಿದನು.
ಅ೦ದು ಯಥಾಪ್ರಕಾರ ಮಧ್ಯಾಹ್ನ ಚೌಕಕ್ಕೆ ಹೋದರೂ ಕನಸಿನ ಕಥೆ ಹೇಳುವಾಗ ಅವನಿಗೆ ಯಾವ ಹುಮ್ಮಸ್ಸೂ ಇರಲಿಲ್ಲ. ಅದಲ್ಲದೆ ಆ ನಿಧಿಯ ಬಗ್ಗೆಯ ಭಾಗವನ್ನು ಯಾರಿಗೂ ಹೇಳಲಿಲ್ಲ.

ಮು೦ದಿನ ರಾತ್ರಿ ಐಸಾಕನಿಗೆ ಮತ್ತೆ ಅದೇ ಕನಸು. ಆದಮ್ ಮತ್ತು ಈವ ಕಥೆ ಇನ್ನೂ ನಡೆಯುತ್ತಿತ್ತು. ಆದರೆ ಇ೦ದು ವಾರಸಾಗೆ ಹೋಗಲು ಆದೇಶವಿತ್ತವನು ಆದಮ್. ಅವನು ಮತ್ತು ಈವ ಚಕ್ಕ೦ದ ವಾಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಆದಮ್ ಐಸಾಕಿನ ಕಡೆ ತಿರುಗಿ ‘ ಈವ್ ನಿನಗೆ ನಿನ್ನೆಯೇ ಹೇಳಲಿಲ್ಲವೇ? ವಾರ್ಸಾ ಗೆ ಹೋಗಿ ಬಾ ‘ ಎ೦ದು ಹೇಳಿದನು. ಕಥೆ ಮುಗಿಯಲೂ ಬಿಡದೆ ಐಸಾಕ್ ಎದ್ದುಬಿಟ್ಟನು. ಬೆಳಕು ಹರಿಯುತ್ತಿದ್ದ೦ತೆ ಸಿನಗಾಗಿ ಹೋಗಿ ‘ ಪ್ರಭು ! ನನ್ನನ್ನು ಏಕೆ ಪರೀಕ್ಷಿಸುತ್ತೀಯೆ ‘ ಎ೦ದು ಹುಲುಬಿದನು. ಅ೦ದು ಮಧ್ಯಾಹ್ನ ಐಸಾಕ್ ಚೌಕಕ್ಕೆ ಹೋಗಲೇ ಇಲ್ಲ. ಮಲಗುವಾಗ ಆತ೦ಕದಿ೦ದಲೇ ಮಲಗಿದನು. ನಿದ್ರೆಯೂ ಸುಲಭವಾಗಿಬರಲಿಲ್ಲ. ಕನಸಿನಲ್ಲಿ ಆದಮ್ ಮತ್ತು ಈವ ಕಥೆಯೇ ಇನ್ನೂ ನಡೆಯುತ್ತಿತ್ತು. ಹಾವಿನ ರೂಪದ ಶೈತಾನ ಈವಳ ಹತ್ತಿರ ಬರಲು ಶುರುಮಾಡಿದ. ಹಾಗೇ ತೆವಳುತ್ತ ತೆವಳುತ್ತ ಇದ್ದಕ್ಕಿದ್ದ ಹಾಗೆ ಐಸಾಕಿನ ಕಡೆ ತಿರುಗಿದ. ‘ ನಿನಗೆ ಏಷ್ಟು ಸತಿ ಹೇಳೋದು ? ವಾರ್ಸಾಗೆ ಹೋಗಿಬಾ ಅ೦ತ ಅವರಿಬ್ಬರು ಹೇಳಿಲ್ವಾ? ಇನ್ನೂ ಇಲ್ಲೇ ಇದ್ದೀಯೆ ‘ಬುಸ್ ಎನ್ನುತ್ತಾ ಮತ್ತೆ ಹಾವು ತೆವಳುತ್ತಾ ಈವಳ ಬಳಿ ಹೋಯಿತು . ಅದು ಯಾವ ತರಹ ಹಾವು ಇರಬಹುದು ಎ೦ದುಮೊದಲಿ೦ದಲೂ ಐಸಾಕ್ ಗೆ ಕುತೂಹಲವಿದ್ದಿತು. ಆದರೆ ಇ೦ದು ಸರಿಯಾಗಿ ನೋಡಲು ಸಮಯವಿರಲಿಲ್ಲ.
ಐಸಾಕ್ ತಕ್ಷಣ ಎದ್ದು ಕುಳಿತ. ಮೈಯೆಲ್ಲಾ ಬೆವರುತ್ತಿತ್ತು ‘ ನನಗೆ ಗೊತ್ತು. ಇದು ಶೈತಾನನ ಪಿತೂರಿಯೆ. ಮೊದಲು ಅವರಿಬ್ಬರ ಕೈಲಿ ಹೇಳಿಸಿದ. ಇ೦ದು ಬೇಸತ್ತು ಅವನೇ ಹೇಳಿಬಿಟ್ಟ. ಈ ನಿಧಿಯ ಆಮಿಷ ಒಡ್ಡಿ ಅವನು ನನ್ನನ್ನು ಅವನ ಕಡೆ ಎಳೆದುಕೊಳಲು ನೋಡುತ್ತಿದ್ದಾನೆ. ಇಲ್ಲ, ನಾನು ಬಗ್ಗಬಾರದು. ನಾನು ಇದಕ್ಕೆಲಾ ಹೆದರಬಾರದು’ ಎ೦ದು ಧೃಡ ಮನಸ್ಸು ಮಾಡಿದ. ಆದರೂ ದಿನದಲ್ಲಿ ಆಗಾಗ್ಗೆ ‘ ಇಲ್ಲ, ನಾನು ವಾರ್ಸಾಗೆ ಹೋಗುವುದಿಲ್ಲ ‘ ಎನ್ನುತ್ತಿದ್ದ. ರಾತ್ರಿಯಾಯಿತು, ಮಲಗಿದ ತಕ್ಷಣ ನಿದ್ದೆಯೂ ಬ೦ದಿತು. ಈವತ್ತು ಕನಸಿನಲ್ಲಿ ಪ್ರಾಯಶ: ಈವ್ ಸೇಬನ್ನು ಕಚ್ಚಬಹುದು ಎ೦ದು ಕೊ೦ಡ. ಆದರೆ ಎಲ್ಲೆಲ್ಲೂ ಅ೦ಧಕಾರ. ಜಗತ್ತೇ ಹುಟ್ಟಿಲ್ಲವೇನೋ ಎ೦ದು ಕೊ೦ಡ ಐಸಾಕ್. ‘ ಹೌದು ಐಸಾಕ್, ನಾನು ಇನ್ನೂ ಜಗತ್ತನ್ನು ಹುಟ್ಟಿಸಿಲ್ಲ. ಬೆಳಕಾಗಲಿ ಎ೦ಬ ವಾಕ್ಯವನ್ನು ನಾನು ಇನ್ನೂ ಉಚ್ಚರಿಸಿಲ್ಲ. ‘ ಐಸಾಕನಿಗೆ ಅನುಮಾನವೇ ಇರಲಿಲ್ಲ. ಇದು ಅವನದ್ದೇ ಧ್ವನಿ. ಮೋಸಸ್ ಬೆಟ್ಟಹತ್ತಿ ಉರಿಯುವ ಪೊದೆಯ ಮು೦ದೆ ನಿ೦ತಾಗ ಬ೦ದ ಧ್ವನಿ. ಅಬ್ರಹಾಮನಿಗೆ ಕುರಿಯನ್ನು ಬಲಿ ಕೊಡು ಎ೦ದು ಹೇಳಿದ ಧ್ವನಿ. ಗಡಸು ಧ್ವನಿ, ಹೌದು ! ಅವನ ಧ್ವನಿಯೇ ಸೇರಿ. ಆದರೆ ಧ್ವನಿಯಲ್ಲಿ ನೋವಿತ್ತು. ಐಸಾಕ್ ನ ಕಣ್ಣಲ್ಲಿ ನೀರು. ಏನು ಪುಣ್ಯ ಮಾಡಿದ್ದೆ ಎ೦ದುಕೊ೦ಡ.
ಮೊಣಕಾಲುಗಳನ್ನು ನೆಲದ ಮೇಲೆ ಊರಿ ಕೈ ಮುಗಿದ. ‘ಪ್ರಭು ! ಏಕೆ ಪ್ರಪ೦ಚವನ್ನು ನೀನು ಇನ್ನೂ ಹುಟ್ಟಿಸಿಲ್ಲ. ಏಕೆ ಈ ಉದಾಸೀನ ? ಕರುಣೆ ಮಾಡು ಪ್ರಭು’ ಸ್ವಲ್ಪ ಮೌನದ ನ೦ತರ ಉತ್ತರ ಬ೦ದಿತು ‘ ಏನು ಮಾಡಲಿ ಐಸಾಕ್, ನೀನು ಯಾರ ಮಾತೂ ಕೇಳುತ್ತಿಲ್ಲ. ವಾರ್ಸಾಗಿ ಹೋಗಿ ನಿಧಿಯನ್ನು ತರುತ್ತಿಲ್ಲ. ನೀನು ಅದನ್ನು ಮಾಡುವ ತನಕ ನಾನೂ ಏನೂ ಮಾಡಲಾರೆ ‘. ‘ ಪ್ರಭು. ಆದರೆ ಅದರೆ ಅದು ಶೈತಾನಿನ ಕುತ೦ತ್ರವಲ್ಲವೇ ‘ಏನಿದು ಐಸಾಕ್, ನಾನು ಹೇಳದೆ ಶೈತಾನ್ ಏನು ಮಾಡಬಲ್ಲ?. ನಿನಗೆ ಅದು ಗೊತ್ತಿಲ್ಲವೇ?’ ‘ ಅ೦ದರೆ ಪ್ರಭು’ ‘ ಹೌದು ಅವರೆಲ್ಲಾ ನಿನಗೆ ಏನು ಮಾಡಬೇಕು ಎ೦ದು ಅಗಲೇ ಹೇಳಿದ್ದಾರೆ. ಅಲ್ಲವೇ? ‘ ಹೌದು ಪ್ರಭು ” ವಾರ್ಸಾಗೆ ಹೋಗಿಬಾ”. ಐಸಾಕ್ ಎದ್ದು ಕುಳಿತ. ಅವನ ಮಾತನ್ನು ಹೇಗೆ ತೆಗೆದುಹಾಕಲಿ ? ನಾನು ವಾರ್ಸಾಗೆ ಹೋಗಲೇಬೇಕು. ಬೆಳಿಗ್ಗೆ ಎದ್ದು ಹೋಗಲು ಏರ್ಪಾಡು ಮಾಡಿಕೊಳ್ಳುತ್ತೇನೆ ಎ೦ದುಕೊ೦ಡು. ಹಾರೆ ಮತ್ತು ಗದಪಾರೆಯನ್ನು ಒ೦ದು ಚೀಲದಲ್ಲಿ ಹಾಕಿಕೊ೦ಡು ಐಸಾಕ್ ದೂರದ ವಾರ್ಸಾಗೆ ಪ್ರಯಾಣ ಮಾಡಿದ.
ದಾರಿಯಲ್ಲಿ ನಡೆಯುತ್ತಾ ಆ ದೊಡ್ಡ ನಗರದಲ್ಲಿ ಹಲವಾರು ಆಮಿಷಗಳಿರುತ್ತವೆ, ಹುಷಾರಾಗಿ ನನ್ನ ಕೆಲಸ ಮುಗಿಸಿ ವಾಪಸ್ಸು ಬ೦ದು ಬಿಡಬೇಕು ಎ೦ದು ನಿಶ್ಚಯಿಸಿದ. ಮೂರು ದಿನಗಳ ನ೦ತರ ಆ ನಗರವನ್ನೂ ಪ್ರವೇಶಿಸಿದ ಕ್ರಾಕೋವಿನ ವಿಸ್ಟುಲಾ ನದಿ ಇಲ್ಲೂ ಹರಿಯತ್ತಿದೆ. ದೂರದಿ೦ದ ಅರಮನೆಯೂ ಕಾಣಿಸಿತು. ಅಲ್ಲಿ ದೊಡ್ಡ ಸೇತುವೆಯೂ ಕಾಣಿಸಿತು. ನೀರೆನೋ ಆಳವಿಲ್ಲ. ಸ್ವಲ್ಪ ಅಗೆದರೆ ನಿಧಿ ಸಿಗಬಹುದು ಎ೦ದುಕೊ೦ಡ. ಆದರೆ ಆ ಸೇತುವೆಯನ್ನು ಒಬ್ಬ ಸೈನಿಕ ಕಾಯುತ್ತಿದ್ದ. ಕನಸಿನಲ್ಲಿ ಆದೇಶ ಕೊಟ್ಟವರು ಯಾರೂ ಈ ಸೈನಿಕನ ಬಗ್ಗೆ ಹೇಳಲಿಲ್ಲ. ಅ ನಿಧಿಯನ್ನು ಕಾಪಾಡುತ್ತಿರಬಹುದು ಎನ್ನಿಸಿತು ಐಸಾಕನಿಗೆ. ಹಾಗೇ ದೂರದಿ೦ದ ನೋಡುತ್ತಿದ್ದಲೇ ಇದ್ದುತನ್ನ ಸಮಯ ಬರಬಹುದೆ೦ದು ಕಾಯುತ್ತಿದ್ದ. ಕೆಲವು ಗ೦ಟೆಗಳ ನ೦ತರ ಸೈನಿಕ ಹೊರಡಲು ತಯಾರಾದ. ಆಗ ಐಸಾಕ್
ಇದೇ ನನ್ನ ಸಮಯ ಎ೦ದುಕೊ೦ಡ. ಆದರೆ ಅವನ ಜಾಗದಲ್ಲಿ ಮತ್ತೊಬ್ಬ ಸೈನಿಕ ಬ೦ದ. ಈವತ್ತು ಸಮಯ ಸರಿಯಿಲ್ಲ, ನಾಳೆ ಬರುತ್ತೇನೆ ಎ೦ದು ಐಸಾಕ್ ತಾನು ಇಳಿದುಕೊ೦ಡಿದ್ದ ಜಾಗಕ್ಕೆ ವಾಪಸ್ಸು ಹೋದ.
ಮು೦ದಿನ ದಿನ ಬೇಗಲೇ ಬ೦ದ. ಆದರೆ ಮತ್ತೆ ಯಾವುದೋ ಸೈನಿಕ ಇದ್ದಿದ್ದನ್ನು ನೋಡಿ ಅಲ್ಲಿಯೇ ಒ೦ದು ಮರದ ಕೆಳಗೆ ಕುಳಿತ. ಮಧ್ಯಾಹ್ನದ ಹೊತ್ತಿಗೆ ಮತ್ತೊಬ್ಬ ಸೈನಿಕ ಬ೦ದ. ಅವನ ಎತ್ತರದ ಟೋಪಿ ನೊಡಿ ಐಸಾಕ್ ಅವರ ಮುಖ್ಯಸ್ಥನಿರಬೇಕು ಎ೦ದುಕೊ೦ಡ. ಅವರಿಬ್ಬರೂ ಎನೋ ಮಾತಾಡಿಕೊ೦ಡ ನ೦ತರ ಆ ಸೈನಿಕ ಐಸಾಕ್ ನ ಬಳಿ ಬ೦ದು ‘ ಬನ್ನಿ, ನಿಮ್ಮನ್ನು ನಮ್ಮ ಕ್ಯಾಪ್ಟನ್ ಕರೆಯುತ್ತಿದ್ದಾರೆ’ ಎ೦ದು ಅವನನ್ನು ತನ್ನ ಮುಖ್ಯಸ್ಥನ ಬಳಿ ಎಳೆದುಕೊ೦ಡುಹೋದ. ಐಸಾಕ್ ಭಯದಿ೦ದ ನಡುಗಲು ಶುರುಮಾಡಿದ. ಆಗ ಆ ಕ್ಯಾಪ್ಟನ್ . ” ಏನು ರಾಬಾಯ್ ! ಇಲ್ಲಿ ಏನು ಮಾಡ್ತಿದ್ದೀರಿ? ನಿನ್ನೆಯಿ೦ದ ಇಲ್ಲೇ ಇದ್ದೀರಿ ಅ೦ತ ನನ್ನ ಸೈನಿಕರು ಹೇಳ್ತಾ ಇದ್ದಾರೆ’. ವಿದ್ರೋಹಿಗಳ ಪರಅಲ್ಲ ತಾನೆ ನೀವು? ‘ ಐಸಾಕ್ ಅವನಿಗೆ ನಮಸ್ಕಾರ ಮಾಡಿ ‘ಇಲ್ಲ ಕ್ಯಾಪ್ಟನ್. ನಾನು ಕ್ರಾಕೋವಿನಿ೦ದ ಬ೦ದಿದ್ದೇನೆ. ನದಿ ಇಷ್ಟವಾಯಿತು. ಹಾಗೇ ನೋಡ್ತಾ ಕೂತಿದ್ದೇನೆ’ ಎ೦ದ. ಕ್ಯಾಪ್ಟನ್ನ್’ ‘ ಇಲ್ಲ, ನೀವು ನಿಜ ಹೇಳುತ್ತಿಲ್ಲ. ನಿಮ್ಮನ್ನು ಮೇಲಧಿಕಾರಿಗಳ ಬಳಿ ಕರೆದುಕೊ೦ಡುಹೋಗಬೇಕಾಗುತ್ತದೆ’ ಎ೦ದ.
ಐಸಾಕ್ ಪೂರ್ತಿ ಹೆದರಿಬಿಟ್ಟ ‘ ಸರಿ, ನಿಮಗೆ ನಿಜ ಹೇಳ್ತೀನಿ’ಎ೦ದು ತನ್ನ ಕನಸಿನ ಬಗ್ಗೆ ಕ್ಯಾಪ್ಟನ್ನಿಗೆ ಹೇಳಿದ. ಅದನ್ನು ಕೇಳುತ್ತಾ ಆ ಕ್ಯಾಪ್ಟನ್ ನಗಲು ಅರ೦ಭಿಸಿ, ಐಸಾಕ ತನ್ನ ಮಾತನ್ನು ಮುಗಿಸಿದ ನ೦ತರವೂ ಜೋರಾಗಿಯೇ ನಗುತ್ತಲೇ ಇದ್ದ. ಕಡೆಗೆ ನಿಲ್ಲಿಸಿ ‘ ನೋಡಿ ಪೂಜಾರಿಯವರೆ ! ನೀವು ಹೇಳುವುದನ್ನು ಕೇಳಿದರೆ ನಗುವುದೋ ಅಳುವುದೋ ಗೊತ್ತಿಲ್ಲ. ನಿಮ್ಮ೦ತವರೇ ಹೀಗೆ. ಅಮಾಯಕರು. ‘ ಅದಕ್ಕೆ ಐಸಾಕ್ ಹೇಳಿದ ‘ ಬರೇ ಈವ್ ಹೇಳಿದ್ದರೆ ಸುಮ್ಮನಿರಬಹುದಿತ್ತು. ಕನಸಿನಲ್ಲಿ ಆದಮ್ ಬ೦ದ, ಅನ೦ತರ ಶೈತಾನ್ ಬ೦ದ ಕಡೆಯಲ್ಲಿ ವಿಧಾತನೂ ಬ೦ದುಬಿಟ್ಟನಲ್ಲ’ ಎ೦ದ. ಕ್ಯಾಪ್ಟನ್ ಮತ್ತೆ ನಗಲು ಪ್ರಾರ೦ಭಿಸಿದ ‘ ನೀವು ದೊಡ್ಡವರು. ಇಲ್ಲದಿದ್ದರೆ ನಿಮ್ಮನ್ನು ಮೂರ್ಖರು ಎ೦ದೇ ಹೇಳುತ್ತಿದ್ದೆ ಯಾವುದೋ ಕನಸನ್ನು ನ೦ಬಿಕೊ೦ಡು ಇಷ್ಟು ದೂರ ಬ೦ದಿದ್ದೀರಲ್ಲ. ಆದಮ್ ಅ೦ತೆ, ಈವ ಅ೦ತೆ. ಶೈತಾನ್ ಅ೦ತೆ. ಸ್ವಲ್ಪ ಬುದ್ಧಿ ಉಪಯೋಗಿಸಿ ಸ್ವಾಮಿ. ಈಗ ನನಗೂ ಕನಸ್ಸು ಬೀಳ್ತಾನೆ ಇರುತ್ತೆ. ನಿಮ್ಮ ತರಹ ಪ್ರತಿ ರಾತ್ರಿ ಅಲ್ಲ. ಆದರೆ ಆಗಾಗ ಆ ಕನಸ್ಸು ಮರುಕಳಿಸುತ್ತಲೇ ಇರುತ್ತೆ. ನಿಮ್ಮ ತರಹ ಅದಮ್ ಗೀದಮ್ ಎಲ್ಲ ನನ್ನ ಕನಸಿನಲ್ಲಿ ಬರೋಲ್ಲ. ಈವ್ ಅ೦ತೂ ಇಲ್ಲವೇ ಇಲ್ಲ. ಕನಸಿನಲ್ಲಿ ಬರುವವರು ನಮ್ಮ ತಾತ ! ಅವರಿಲ್ಲ ಈಗ’.
‘ ಏನು ನಿಮ್ಮ ಕನಸು ಕ್ಯಾಪ್ಟನ್” ಎ೦ದು ಐಸಾಕ್ ಕೇಳಿದ. ಕ್ಯಾಪ್ಟನ್ ಮತ್ತೆ ನಗಲು ಶುರುಮಾಡಿದ . ‘ ಸ್ವಾಮೀ ಪೂಜಾರಿಗಳೇ ! ನನ್ನ ಕನಸಿನಲ್ಲಿ ನನ್ನ ತಾತ ಬ೦ದು ಕ್ರಾಕೋವಿಗೆ ಹೋಗು, ಅಲ್ಲಿ ಒ೦ದು ಹಳೆಯ ಸಿನೊಗಾಗಿದೆ. ಅದನ್ನ ಐಸಾಕ್ ಅ೦ತ ಒಬ್ಬ ಪೂಜಾರಿ ನೋಡ್ಕೊಳ್ತಾ ಇರ್ತಾನೆ. ಅವನ ಮನೆಯ ಹಿತ್ತಲಲ್ಲಿ ದೊಡ್ಡ ನಿಧಿ ಇದ. ಅಲ್ಲಿಗೆ ಹೋಗಿ ಅದನ್ನು ಅಗೆದು ತೆಗೆದುಕೊ’. ಈ ಕನಸು ಬೀಳುತ್ತಲೇ ಇರುತ್ತದೆ. ಆದರೆ ನಾನು ನಿಮ್ಮ ತರಹ ಹುಚ್ಚನಲ್ಲ. ಕ್ರಾಕೊ ಅ೦ತೆ ! ಸಿನಗಾಗ್ ಅ೦ತೆ! ಐಸಾಕ್ ಅ೦ತೆ ! ಸ್ವಾಮೀ, ಸುಮ್ಮನೆ ವಾಪಸ್ಸು ಹೋಗಿ. ಈ ಊರಿನಲ್ಲಿ ಇದ್ದು ಹಣ ಯಾಕೆ ಹಾಳುಮಾಡಿಕೊಳ್ತೀರಿ !’. ಆ ಸೇನಾಪತಿಯ ಮಾತು ಕೇಳುತ್ತಾ ಕೇಳುತ್ತಾ ಐಸಾಕಿನ ಮುಖದಲ್ಲಿ ನಗೆ ಮೂಡಿತು. ಅವನಿಗೆ ವಿದಾಯ ಹೇಳಿ ಐಸಾಕ್ ವಾಪಸ್ಸು ಕ್ರಾಕೋವಿಗೆ ಬ೦ದ.
ಕ್ರಾಕೋವಿಗೆ ಬ೦ದಿದ್ದೇ ತನ್ನ ಮನೆಯ ಹಿತ್ತಲನ್ನು ಅಗೆದ. ಆ ಕ್ಯಾಪ್ಟನ್ ಹೇಳಿದ೦ತೆ ಅಲ್ಲಿ ದೊಡ್ಡ ನಿಧಿಯೇ ಇದ್ದಿತು. ಅದರಲ್ಲಿ ಸಲ್ಪ ಹಣವನ್ನು ತೆಗೆದುಕೊ೦ಡು ತನ್ನ ದೇವಸ್ಥಾನದ ಚಾವಣಿಯನ್ನು ರಿಪೀರಿ ಮಾಡಿಸಿಕೊ೦ಡ. ಬಡಬಗ್ಗರಿಗೆ ಮೊದಲಿಗಿ೦ತಲೂ ಹೆಚ್ಚಾಗಿ ಸಹಾಯಮಾಡಲು ಪ್ರಾರ೦ಭಿಸಿದ ಬೇಕಾಗಿದ್ದಾಗೆಲ್ಲ ಅವನು ಮತ್ತೆ ಮತ್ತೆ ಹಿತ್ತಲನ್ನು ಅಗೆದು ಹಣವನ್ನು ತ೦ದು ಉಪಯೋಗಿಸುತ್ತಿದ್ದ. ಮೊದಲೇ ಕಥೆಗಾರನೆ೦ದು ಪ್ರೀತಿಗಳಿಸಿದ್ದ ಐಸಾಕ್ ಊರಿನ ಎಲ್ಲ ಜನರ ಗೌರವಕ್ಕೂ ಕೂಡ ಪಾತ್ರನಾದನು.. ಮನೆಗೆ ವಾಪಸ್ಸು ಬ೦ದ ನ೦ತರ ಅವನು ಬೈಬಲ್ ಅಲ್ಲದೆ ಬೇರೆಯ ಪುಸ್ತಕಗಳನ್ನೂ ಓದಲು ಪ್ರಾರ೦ಭಿಸಿದ: ಅರಬಸ್ಥಾನದ ಸಾವಿರ ಮತ್ತು ಒ೦ದು ರಾತ್ರಿಗಳ ಕಥೆಗಳು, ಹಿ೦ದೂಸ್ಥಾನದ ಪ೦ಚತ೦ತ್ರ, ಕಥಾಸಾಗರ ಇತ್ಯಾದಿ. ಆಗಿನಿ೦ದ ಅವನ ಕನಸುಗಳಲ್ಲಿ ಕರಟಕ, ದಮನಕ, ವಿಕ್ರಮ ಬೇತಾಳ, ಸಿ೦ದಬಾದ್, ಅಲ್ಲೌದ್ದೀನ್, ಶಹ್ಜಾದೆ, ಹೀಗೆ ಯಾರು ಯಾರೋ ಬರುವರು. ಈ ಅದ್ಭುತ ಕನಸುಗಳನ್ನು ಪ್ರತಿ ಮಧ್ಯಾಹ್ನ ಚೌಕದ ಬಳಿ ಹೋಗಿ ಎಲ್ಲರಿಗೂ ಹೇಳುತ್ತಾ ಹೇಳುತ್ತಾ ಐಸಾಕ್ ಮುದುಕನಾದ. ಹಾಗೇ ಒ೦ದು ದಿನ ಅವನ ಕನಸುಗಳೂ ನಿ೦ತು ಹೋದವು..

No comments:

Post a Comment